Wednesday, January 23, 2019

ಹೈಕ 6 ಜಿಲ್ಲೆ: ಕ್ರೀಡಾಂಗಣಗಳಿಗೆ ಮೂಲ ಸೌಲಭ್ಯ ಕಲ್ಪಿಸಲು ಸಲಹೆ


ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಈಗಾಗಲೇ ನಿರ್ಮಾಣಗೊಂಡಿರುವ ಕ್ರೀಡಾಂಗಣಗಳನ್ನು ಅಗತ್ಯ ಮೂಲ ಸೌಕರ್ಯಗಳೊಂದಿಗೆ ಸುಸಜ್ಜಿತವಾಗಿಡಬೇಕು ಎಂದು ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ. ಡಿ.ಕಲ್ಪನಾ ತಿಳಿಸಿದರು.

ಹೈಕ 6 ಜಿಲ್ಲೆ: ಕ್ರೀಡಾಂಗಣಗಳಿಗೆ ಮೂಲ ಸೌಲಭ್ಯ ಕಲ್ಪಿಸಲು ಸಲಹೆ
ಬೀದರ್‌:ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಈಗಾಗಲೇ ನಿರ್ಮಾಣಗೊಂಡಿರುವ ಕ್ರೀಡಾಂಗಣಗಳನ್ನು ಅಗತ್ಯ ಮೂಲ ಸೌಕರ್ಯಗಳೊಂದಿಗೆ ಸುಸಜ್ಜಿತವಾಗಿಡಬೇಕು ಎಂದು ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ. ಡಿ.ಕಲ್ಪನಾ ತಿಳಿಸಿದರು.

BDR-19-1-BDR7

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ನಡೆದ ಹೈಕದ ಆರು ಜಿಲ್ಲೆಗಳ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರುಗಳ ಸಭೆಯಲ್ಲಿ ಮಾತನಾಡಿದರು.

ಕ್ರೀಡಾಂಗಣಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಹೈಕ ಪ್ರದೇಶಾಭಿವೃದ್ಧಿ ಮಂಡಳಿ, ನಗರೋತ್ಥಾನ ಸೇರಿದಂತೆ ಬೇರೆ ಬೇರೆ ಕಡೆಗಲ್ಲಿ ಪ್ರಸ್ತಾವನೆ ಸಲ್ಲಿಸಿ ಅನುದಾನ ಪಡೆದು ಕೆಲಸ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ. ಇನ್ನೂ ಅಗತ್ಯವಿರುವ ಅನುದಾನದ ಬಗ್ಗೆ ಇಲಾಖೆಗೆ ಕೂಡಲೇ ಪ್ರಸ್ತಾವನೆ ಸಲ್ಲಿಸಿ, ಅನುದಾನ ಬಿಡುಗಡೆ ಮಾಡಲಾಗುವುದು ಎಂದರು.

ಇಲಾಖೆಯಲ್ಲಿ ಕಾಯಂ ನೌಕರರ ಸಂಖ್ಯೆ ಬಹಳ ಕಡಿಮೆಯಿದೆ. ಹೊರಗುತ್ತಿಗೆ ನೌಕರರನ್ನೇ ಅವಲಂಬಿಸುವಂತಾಗಿದೆ. ಎಸ್‌ಡಿಸಿ, ಎಫ್‌ಡಿಸಿ, ಸೇವಕರು ಇಲ್ಲದೇ ನಾವೊಬ್ಬರೇ ಕೆಲಸ ನಿರ್ವಹಿಸುತ್ತಿದ್ದೇವೆ. ಕ್ರೀಡಾಂಗಣಗಳಿಗೆ ಭದ್ರತೆ ಒದಗಿಸಲು ಕಾವಲುಗಾರರಿಲ್ಲ ಎಂದು ಕೆಲವು ಜಿಲ್ಲೆಗಳ ಅಧಿಕಾರಿಗಳು ಸಭೆಗೆ ತಿಳಿಸಿದರು.

ನಮ್ಮ ಜಿಲ್ಲೆಯಲ್ಲಿ ಕಾಯಂ ತರಬೇತುದಾರರಿಲ್ಲ. ನಮ್ಮಲ್ಲಿ ತರಬೇತುದಾರರೇ ಸಿಗುತ್ತಿಲ್ಲ. ಅವರಿಗೆ ವೇತನ ಪಾವತಿಸಿಲ್ಲ ಎಂದು ಕೆಲವು ಜಿಲ್ಲೆಗಳ ಅಧಿಕಾರಿಗಳು ಸಭೆಗೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಪರ ಮುಖ್ಯಕಾರ್ಯದರ್ಶಿಗಳು, ತರಬೇತಿದಾರರನ್ನು ಪಡೆದುಕೊಳ್ಳಲು ಇಲಾಖೆಯಿಂದ ಅನುಕೂಲ ಕಲ್ಪಿಸಿಕೊಡುವುದಾಗಿ ಹೇಳಿದರು.

ತಾಲೂಕು ಕ್ರೀಡಾಂಗಣಗಳಿಗಿಲ್ಲ ಕಾಂಪೌಂಡ್‌:

ಅಫಜಲಪುರ ಬಿಟ್ಟರೆ ಬೇರೆ ಯಾವ ತಾಲೂಕುಗಳಲ್ಲಿಯೂ ಕ್ರೀಡಾಂಗಣಗಳಿಗೆ ಕಾಂಪೌಂಡ್‌ ಗೋಡೆಯಿಲ್ಲ. ತುಂಬಾ ಅಚ್ಚುಕಟ್ಟಾಗಿ ನಿರ್ಮಿಸಿದ್ದರಿಂದ ಈಜುಕೊಳಕ್ಕೆ ಬಹಳಷ್ಟು ಜನರು ಬರುತ್ತಾರೆ. ಜಿಲ್ಲಾ ಕ್ರೀಡಾಂಗಣದಲ್ಲಿ ಸಿಂಥೆಟಿಕ್‌ ಟ್ರ್ಯಾಕ್‌ ದುರಸ್ತಿಯಾಗಬೇಕಿದೆ ಎಂದು ಕಲಬುರಗಿ ಜಿಲ್ಲೆಯ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು. ಕಲಬುರಗಿ ಜಿಲ್ಲೆಗೆ ಅಗತ್ಯವಿರುವ 50 ಕೋಟಿ ರೂ.ಗೆ ಕೂಡಲೇ ಪ್ರಸ್ತಾವನೆ ಸಲ್ಲಿಸಿ ಎಂದು ಆಯುಕ್ತ ಕೆ. ಶ್ರೀನಿವಾಸ ತಿಳಿಸಿದರು.

ಇಲಾಖೆಯ ಜಂಟಿ ನಿರ್ದೇಶಕ ಎಂ.ಎಸ್‌. ರಮೇಶ. ಸುಭಾಷ್‌ ಚಂದ್ರ, ಉಪ ನಿರ್ದೇಶಕ ಬಸವರಾಜ ಹಡಪದ ಹಾಗೂ ಇತರರು ಇದ್ದರು.

ಜಿಲ್ಲಾ ಅಧಿಕಾರಿಗಳಿಂದ ಬೇಡಿಕೆ

ಈಗಾಗಲೇ 3 ಕೋಟಿ ರೂ.ವೆಚ್ಚದಲ್ಲಿ ಜಿಲ್ಲಾ ಕ್ರೀಡಾಂಗಣ ನಿರ್ಮಾಣವಾಗಿದೆ. ನಮ್ಮ ಜಿಲ್ಲೆಯಲ್ಲಿ ಈಜುಕೊಳದಲ್ಲಿ ನೀರಿಲ್ಲದಂತಹ ಸ್ಥಿತಿಯಿದೆ. ನೂತನ ತಾಲೂಕು ಮಾನ್ವಿಯಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ನಿವೇಶನದ ಅಗತ್ಯವಿದೆ. 5 ಕೋಟಿ ರೂ. ಅನುದಾನ ಬೇಕು ಎಂದು ರಾಯಚೂರು ಜಿಲ್ಲೆಯ ಅಧಿಕಾರಿ ಸಭೆಗೆ ಕೋರಿದರು.

ನಮ್ಮಲ್ಲಿ ತರಬೇತುದಾರರಿಲ್ಲ. ಇಲಾಖೆಯಿಂದ ನಡೆಯುತ್ತಿರುವ ವಸತಿ ನಿಲಯಕ್ಕೆ ಮೂಲಸೌಕರ್ಯ ಕಲ್ಪಿಸಲು ಅನುದಾನ ಸೇರಿದಂತೆ 8 ಕೋಟಿ ರೂ. ಅನುದಾನ ಬೇಕಿದೆ ಎಂದು ಬಳ್ಳಾರಿ ಜಿಲ್ಲೆಯ ಅಧಿಕಾರಿ ಹೇಳಿದರು.

ವಸತಿ ನಿಲಯ ನವೀಕರಣಗೊಳಿಸುವುದಕ್ಕೆ ಸಂಬಂಧಿಸಿದಂತೆ ಪರಿಷ್ಕೃತ ಪ್ರಸ್ತಾವನೆ ಸಲ್ಲಿಸಿ ಎಂದು ಆಯುಕ್ತರು ಸೂಚಿಸಿದರು.

42 ಎಕರೆ ಪ್ರದೇಶದಲ್ಲಿ ಜಿಲ್ಲಾ ಕ್ರೀಡಾಂಗಣ ನಿರ್ಮಿಸಲಾಗಿದೆ. ಈಜುಕೊಳ ನಿರ್ಮಾಣ ಕಾಮಗಾರಿ ಮುಕ್ತಾಯ ಹಂತದಲ್ಲಿದೆ. ಜಿಮ್‌ ಇದೆ, ತರಬೇತುದಾರರಿಲ್ಲ ಎಂದು ಯಾದಗಿರಿ ಅಧಿಕಾರಿ ತಿಳಿಸಿದರು. 18 ಎಕರೆ ವಿಸ್ತೀರ್ಣದಲ್ಲಿರುವ ಜಿಲ್ಲಾ ಕ್ರೀಡಾಂಗಣಕ್ಕೆ ಕಾಂಪೌಂಡ್‌ ಗೋಡೆ ಇಲ್ಲ. ಕುಷ್ಟಗಿಯಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕಾಗಿ 2 ಕೋಟಿ ರೂ. ಪ್ರಸ್ತಾವನೆಯನ್ನು ಹೆಚ್‌ಕೆಆರ್‌ಡಿಬಿ ಸಲ್ಲಿಸಲಾಗಿದೆ ಎಂದು ಕೊಪ್ಪಳ ಜಿಲ್ಲೆಯ ಅಧಿಕಾರಿ ಹೇಳಿದರು.

ಹುಮನಾಬಾದ್‌ ಪಟ್ಟಣದಲ್ಲಿ 75 ಲಕ್ಷ ರೂ.ವೆಚ್ಚದಲ್ಲಿ ಕ್ರೀಡಾಂಗಣ ಪೂರ್ಣಗೊಂಡಿದೆ. 200 ಮೀಟರ್‌ ಟ್ರ್ಯಾಕ್‌, ಕಾಂಪೌಂಡ್‌ ಗೋಡೆ, ಗಾರ್ಡನ್‌, ಪೆವಿಲಿಯನ್‌ ಕಟ್ಟಡ ಸೇರಿದಂತೆ ಇಲ್ಲಿ ಅಗತ್ಯ ಸೌಕರ್ಯವಿದೆ. ಇಲ್ಲಿ ಇನ್ನಿತರ ಕಾಮಗಾರಿ ಮತ್ತು ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ 50 ಲಕ್ಷ ರೂ. ಬೇಕಿದೆ. ಭಾಲ್ಕಿ ಕ್ರೀಡಾಂಗಣಕ್ಕೆ 50 ಲಕ್ಷ ರೂ. ವೆಚ್ಚ ಮಾಡಲಾಗಿದೆ. ಔರಾದ್‌, ಬಸವಕಲ್ಯಾಣ ಹಾಗೂ ಬೀದರ್‌ ಸೇರಿದಂತೆ ಜಿಲ್ಲಾದ್ಯಂತ ಕ್ರೀಡಾಂಗಣಗಳ ಅಭಿವೃದ್ಧಿಗೆ ಬಹಳಷ್ಟು ಅನುದಾನ ಬೇಕಿದೆ ಎಂದು ಬೀದರ್‌ ಸಹಾಯಕ ನಿರ್ದೇಶಕರು ಕೋರಿದರು.

Source: https://vijaykarnataka.indiatimes.com/district/bidar/hk-6-district-recommended-for-providing-basic-facilities-for-stadiums/articleshow/67602597.cms

" Twitter: #BidarInfo (@BidarInfo) "

No comments:

Post a Comment