Thursday, November 22, 2012

ವಚನಾಂಕಿತ ತಿದ್ದಿದವರ ಮೇಲೆ ಕ್ರಮಕ್ಕೆ ಆಗ್ರಹ

ಬಸವಕಲ್ಯಾಣ : ಬಸವಾದಿ ಶರಣರ ವಚನಾಂಕಿತ ತಿದ್ದಿದವರ ಸಾಲಿನಲ್ಲಿ ಮಾತೆ ಮಹಾದೇವಿಯವರ ನಂತರ ಬೀದರ್ ಜಿಲ್ಲೆಯವರೇ ಆಗಿರುವ ಸಚ್ಚಿದಾನಂದ ಚಟ್ನಳ್ಳಿ ಸೇರಿಕೊಂಡಿದ್ದು, ಅವರ ಮೇಲೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಕಾಶಪ್ಪ ಬಾಲಿಕಿಲೆ ಒತ್ತಾಯಿಸಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿಯವರಿಗೆ ಮನವಿ ಕಳುಹಿಸಿರುವ ಅವರು, ಮಾತೆ ಮಹಾದೇವಿಯವರು ಬಸವಣ್ಣನವರ ವಚನಾಂಕಿತ ಕೂಡಲ ಸಂಗಮದೇವ ಇರುವುದನ್ನು `ಲಿಂಗದೇವ` ಮತ್ತು ಅಕ್ಕ ಮಹಾದೇವಿಯವರ ವಚನಾಂಕಿತ `ಮಹಾದೇವಿ ಅಕ್ಕ ಲಿಂಗಪ್ರಿಯ` ಎಂದು ಬದಲಾಯಿಸಿದರು.

ಈಗ ಅವರ ಶಿಷ್ಯ ಚಟ್ನಳ್ಳಿ ಸಹ ಅವರದೇ ದಾರಿಯಲ್ಲಿ ಹೊರಟಿದ್ದು `ಅಕ್ಕನ ಸಮಗ್ರ ವಚನಗಳು` ಮತ್ತು `ಯೋಗಾಂಗ ತ್ರಿವಿಧಿ` ಪುಸ್ತಕದಲ್ಲಿ ಶರಣೆ ಅಕ್ಕ ಮಹಾದೇವಿಯವರ ವಚನಾಂಕಿತ ಚನ್ನ ಮಲ್ಲಿಕಾರ್ಜುನ ಎನ್ನುವ ಬದಲು `ಚನ್ನ ಮಲ್ಲಿಕಾರ್ಜುನ ದೇವರ ದೇವಾ` ಎಂದು ತಿದ್ದುಪಡಿ ಮಾಡಿದ್ದಾರೆ. ಇದು ಅಕ್ಷಮ್ಯ ಅಪರಾಧ ಎಂದಿದ್ದಾರೆ.

ಸಾಹಿತ್ಯ ತಿದ್ದುವ ಅಧಿಕಾರ ಯಾರಿಗೂ ಇಲ್ಲ. ಆದರೆ ಮಾತೆ ಮಹಾದೇವಿಯವರು ಬಸವಣ್ಣನವರ ಹೆಸರಿನಲ್ಲಿ ಬಸವಧರ್ಮ ಪೀಠ ಕಟ್ಟಿಕೊಂಡು ಅವರ ವಿರುದ್ಧವೇ ಕೆಲಸ ಮಾಡುತ್ತಿದ್ದಾರೆ. ಇಂಥವರ ಕಾರ್ಯವನ್ನು ನಾಡಿನ ಮಠಾಧೀಶರು, ರಾಜಕೀಯ ಮುಖಂಡರು, ಸಂಘ ಸಂಸ್ಥೆಯವರು ಒಕ್ಕೊರಲಿನಿಂದ ಖಂಡಿಸಬೇಕು. ಸುಮ್ಮನಿದ್ದರೆ ಹೀಗೆ ನಾನು ಮಾಡಿದ್ದೇ ಸರಿ ಎನ್ನುವವರ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ ಎಂದಿದ್ದಾರೆ.

ಒಂದನಾಡ ಹೋಗಿ ಒಂಭತ್ತನಾಡುವ ಡಂಭರ ಮೆಚ್ಚ ಕೂಡಲಸಂಗಮದೇವ ಎಂದು ಬಸವಣ್ಣ ಹೇಳಿದ್ದಾರೆ. ವೈರಾಗ್ಯ ತಾಳಿದವರ ಮನಸ್ಸು ಮರ್ಕಟನಂತಿರದೆ ಮಗುವಿನಂತಿರಬೇಕು ಎಂದಿದ್ದಾರೆ. ಆದರೆ
ಮಾತೆ ಮಹಾದೇವಿ ಮತ್ತು ಅವರ ಶಿಷ್ಯರು ಹಟವಾದಿಗಳಾಗಿ ಧರ್ಮದ್ರೋಹ ಬಗೆಯುತ್ತಿದ್ದಾರೆ.

ತಪ್ಪು ಮಾಡುವುದು ಸಹಜ, ತಪ್ಪನ್ನು ಒಪ್ಪಿಕೊಳ್ಳುವುದು ಮಾನವೀಯತೆ. ಆದ್ದರಿಂದ ತಾವು ಮಾಡಿದ ತಪ್ಪನ್ನು ಇವರಿಬ್ಬರು ಒಪ್ಪಿಕೊಳ್ಳಬೇಕು. ಇಲ್ಲದಿದ್ದರೆ ಸರ್ಕಾರವೇ ಇವರಿಗೆ ಪಾಠ ಕಲಿಸಬೇಕು ಎಂದು ಪರಿಷತ್ತಿನ ಪ್ರಮುಖರಾದ ಮಲ್ಲಪ್ಪ ಲಾತೂರೆ, ನಾಗಯ್ಯ ಕೊಳ್ಳೂರ, ಶಾಂತಲಿಂಗ ಮಠತಿ ಸಹ ಮನವಿಯಲ್ಲಿ ಆಗ್ರಹಿಸಿದ್ದಾರೆ.

source:http://prajavani.net/include/story.php?news=109363&section=111&menuid=10

No comments:

Post a Comment